ಮಂಗಳವಾರ, ಸೆಪ್ಟೆಂಬರ್ 28, 2010

ನಾನು - ನೀನು

ಒಣಗಿ ನಿಂತ ಬೆಳೆಯ
ನಡುವೆ ಕುಳಿತು
ಆಕಾಶದತ್ತ ಆಸೆಯ ಕ್ಷೀಣದೃಷ್ಟಿ
ಬಿರಿ ನಿಂತ ರೈತ - ನಾನು

ಈ ಕ್ಷಣದಿ ಸುರಿದು
ಮರುಕ್ಷಣ ನಿಂತು
ಅನುಕ್ಷಣವು
ಚಂಚಲಗೊಳ್ಳುವ
ಮಲೆನಾಡ ಮಳೆ - ನೀನು.

ಭಗ್ನ ಪ್ರೇಮಕ್ಕೊಂದು ನಮಸ್ಕಾರ!!!

ಈ ಬದುಕಿನ ಹಲವು ಆಯಾಮಗಳಂತೆ ಪ್ರೇಮಕ್ಕೂ ಎರಡು ಮುಖ. ಸಫಲ ಪ್ರೇಮದಲಿ ಬರೀ ಸುಖವೇ ತುಂಬಿರುವಂತೆ, ವಿಫಲ ಪ್ರೇಮದಲ್ಲೂ ನೋವಿನ ಸಿಹಿ! ವಿಫಲ ಪ್ರೇಮದ ನೋವು, ಹತಾಶೆ, ಸಂಕಟ ಇದಾವುದನ್ನು ಅನುಭವಿಸದೆ ಸಾಯುವದು, ಮಲೆನಾಡಲ್ಲೇ ಇದ್ದು ಮಳೆ ನೋಡದ ನಿರ್ಭಾಗ್ಯ ಸ್ಥಿತಿ!!
ಪ್ರತಿ ವಿಫಲ ಪ್ರೇಮಕ್ಕೂ ತನ್ನದೇ ಆದ ನೆನಪು, ಗಂಧ, ಬೆವರು, ನೋವು, ಯಾತನೆ, ಮುರಿದು ಹೋದ ಮನಸಿನ ನರಳಿಗೆ, ಸಮಾಧಿ ಸೇರಿದ ಕನಸಿನ ಕನವರಿಕೆ, ನಡೆದು ಹೋದ ಹೆಜ್ಜೆ ಗುರುತು, ನಕ್ಕ ನಗೆಗಳ ಲೆಕ್ಕ, ಒಂದು ನಂಬಿಕೆ ಮತ್ತು ಒಂದು ವಂಚನೆ ಎಲ್ಲ ಇರುತ್ತೆ.
ಅದೊಂದು ಮಧುರ ಯಾತನೆಯ ಅನುಭೂತಿ. ಆ ನೋವಿನಲ್ಲೂ ಒಂದು ಸುಖ! ಆ ವಿಷಾಧಕ್ಕೂ ಒಂದು ಘನತೆ!! ಆ ನರಳಿಕೆಗೂ ಒಂದು ಸಾರ್ಥಕತೆ!!! ಇದೆಲ್ಲವನ್ನೂ ಅನುಭವಿಸದೇ ಸಾಯುವದು ಹೀನಾಯ!!! ಅದಕ್ಕೆ ಅಲ್ಲವೇ ಜಯಂತ್ ಬರೆದದ್ದು "ಮಧುರ ಯಾತನೆ..."!
ಪ್ರತಿ ಮನುಷ್ಯನು ಪ್ರೀತಿಸಬೇಕು! ಜೀವನದ ಕೊನೆ ಕ್ಷಣದವರೆಗೂ ಮೆಲಕು ಹಾಕುತ್ತಾ ಒಂದು ಸುಮಧುರ ಯಾತನೆ ಅನುಭವಿಸಲು ಒಂದು ವಿಫಲ ಪ್ರೇಮ ಅವನೊಳಗಿರಬೇಕು!!!
ಸ್ಫೂರ್ತಿ : ಜೋಗಿ

ಈಜುಗಾರ!

ನನ್ನ ಕವಿತೆಗಳೆಲ್ಲವೂ
ನಿನ್ನ ಕಣ್ಣ ಕಡಲಲ್ಲಿವೆ
ನಾನೇನು ಕವಿಯಲ್ಲ!
ಆ ಮುತ್ತುಗಳನ್ನು
ಹೆಕ್ಕಿ ತರುವ
ಈಜುಗಾರನಷ್ಟೇ!!

ಶುಕ್ರವಾರ, ಸೆಪ್ಟೆಂಬರ್ 24, 2010

ಇನ್ನೊಂದು ಸ್ವಗತ

ಮೂರು ಸ್ವರದ ಹಾಡಿನಲಿ
ಮಿಡಿತಗಳ ಬಣ್ಣಿಸಬಹುದೆ
ನಾಲ್ಕು ಪದದ ಗೀತೆಯಲಿ
ಹೃದಯವನು ಹರಿಬಿಡಬಹುದೆ
ಉಕ್ಕಿ ಬರುವ ಕಂಠದಲಿ
ನಲಗುತಿದೆ
ನಲುಮೆಯ ಗಾನ
ಧಿಕ್ಕರಿಸುವ ಎದೆಯೊಳಗೆ
ನಗುತಲಿದೆ
ಮಡಿದ ಕವನ
ಒಂಟಿತನದ ಗುರುವೇ ಒಲವೇ...

ಗುರುವಾರ, ಸೆಪ್ಟೆಂಬರ್ 16, 2010

ಮುಗಿಲ ಸಿಂಚನ

ಮನದ ತೋಟದಲಿ ಅರಳಿ ನಗುವ ಹೂವಿನಂತವನ ಜೊತೆಗೆ ಮತ್ತೆ ಜೋಗ-ಕೊಡಚಾದ್ರಿಯ ಚಾರಣ!
ಬೆಳಗಾವಿಯ ಕುಂದಾ ನೆನಪಿಸುವ ಕುಂದಾಪುರದಲಿ ನಾವು ಇಳಿದಾಗ ಬೆಳಗಿನ ಚುಮುಚುಮು ಆರು ಘಂಟೆ. ಬಸ್ಟ್ಯಾoಡಿನ ಪಕ್ಕದ ಕಾಕಾ ಹೋಟೆಲಿನಲ್ಲಿ ಕುಡಿದ ಹಬೆಯಾಡುವ ಟೀ: ದೇವತೆಗಳು ಆಗಷ್ಟೇ ಕೆಳಗಿಳಿದು ಕೈಗಿಟ್ಟ ಅಮೃತ. ಅಮೃತದಂತಹ ಟೀ ಕುಡಿದು ಅದರ ಬಿಸಿಯಲ್ಲೇ ಗಜಾನನ ಬಸ್ಸೇರಿದ ಕ್ಷಣ. ಸಮುದ್ರದ ಪಾದದ ಮೇಲೆ ಕಟ್ಟಿದ ಸೇತುವೆಯ ಮೇಲೇರಿ ದಟ್ಟ ಕಾನನದ ಜೊತೆಗೆ ಶಿಖರದ ಒಡಲು ಸೀಳಿ ಗಿರಗಿರನೆ ತಿರುಗಿ ಏರುವ ಬಸ್ಸು ಹೋಗಿ ನಿಂತದ್ದು ಕೊಲ್ಲೂರು ಮೂಕಾಂಬಿಕೆಯ ದಿವ್ಯ ಸನ್ನಿಧಿಯಲಿ. ಇಳಿದು, ಹೋಟೆಲಿನವನು ಕೇಳಿದ ಐವತ್ತು ಕೊಟ್ಟು ಹೊರಗಡೆ ವರ್ಷದೆವತೆಯೇ ಕೆಳಗಿಳಿದಂತೆ ಸುರಿಯುತಿರುವ ಅದ್ಭುತ ಮಳೆಯಲ್ಲಲ್ಲದೇ ಇಕ್ಕಟ್ಟು ರೂಮಿನಲ್ಲಿ ಅದೇ ತಣ್ಣೀರು ಸುರಿದುಕೊಂಡು ಸ್ನಾನದ ಶಾಸ್ತ್ರ ಮಾಡಿ ಮುಗಿಸಿದ ನಡುಕ. ಹೊರಗಡೆ ಬಂದರೆ ಅದೇ ಇಡ್ಲಿ, ದೋಸೆ, ಉಪ್ಪಿಟ್ಟು! ಯಾವುದೋ ಒಂದು ತಿಂದು ಬಾಗಿಲಲ್ಲೇ ಮೂಕಾಂಬಿಕೆಗೆ ಹಾಯ್, ಬಾಯ್ ಎರಡೂ ಹೇಳಿ ಸಂಪೇಕಟ್ಟೆಗೆ ಓಟ.
ಹೆಸರಿನಷ್ಟೇ ಅಂದವಾದ ಸಂಪೆಕಟ್ಟೆಯಲಿ ಇಳಿದು ಹುಡುಕಿದಾಗ ಸಿಕ್ಕಿದ್ದು ಹೊಚ್ಚ ಹೊಸ ಮಾರುತಿ ಒಮ್ನಿ! ಒಮ್ನಿಯ ತೆಕ್ಕೆಯಲಿ ಸಿಕ್ಕು ಮೆತ್ತಗಾಗುತ್ತ ಸಾಗಿ ನಿಂತಿದ್ದು ಕಟ್ಟಿನ ಹೊಳೆ ಎಂಬ ಮಲೆನಾಡ ಸೆರಗಿನಲಿ. ಶ್ರಾವಣದಲ್ಲೂ ಆಮ್ಲೆಟ್ ತಿಂದು ಏರತೊಡಗಿದ್ದು ಕೊಡಚಾದ್ರಿಯ ಗಿರಿಶೃಂಗಕೆ.
ಕಡಿದಾದ ಬೆಟ್ಟ ಹತ್ತುವ ಕಷ್ಟ ಕಾಣದಂತೆ ನಡೆದು ಹೋದ ಅಂದಿನ ಕಥೆ ಒಯ್ದು ಮುಟ್ಟಿಸಿದ್ದು ಬೆಟ್ಟದ ಹೆಗಲಿಗೆ . ಮುಟ್ಟಿದ ಸಾಯಂಕಾಲ ಆರು ಘಂಟೆಗೆನೆ ಸತ್ತು ಹೋಗೋಷ್ಟು ಹಸಿವು. ಮನುಷ್ಯ ಮಾತ್ರರು ಊಟ ಮಾಡದ ಆ ಸಮಯದಲ್ಲೇ ಅಮೃತದಂತಹ ಅನ್ನ, ಸಾರು, ಹಪ್ಪಳ. ಕೊಡಚಾದ್ರಿಯಲಿ ಸಂಜೆ ಕರಗಿ ರಾತ್ರಿಯಾಗುವ ಮೊದಕ್ಕೆ ಸಾಕ್ಷಿಯಾದ ನಾವಿಬ್ಬರು. ದಣಿದ ದೇಹಕ್ಕೆ ಹಳೆ ಚಾಪೆ, ಹಳೆ ದಿಂಬು. ಅವತ್ತು ಅದೇ ಹಂಸತೂಲಿಕಾಕಲ್ಪ!! ಬೆಳಿಗ್ಗೆ ಎದ್ದು ಕಣ್ಬಿಟ್ಟಾಗ ಇನ್ನೂ ಬಿಡದ ಮಂಜು, ಮಳೆ!!
ಅಂತಹ ಅದ್ಭುತ ಪರಿಸರದಲಿ ನಮ್ಮ ಮೈಯ ಕೊಳೆ ಯಾಕೆ ಬಿಡಬೇಕು ಎಂಬ ಪರಿಸರ ಪ್ರಜ್ಞೆ!!! ಆ ಪ್ರಜ್ಞೆಯಲ್ಲೇ ಸ್ನಾನ ಮಾಡದೆ ತಿಂದ ಉಪ್ಪಿಟ್ಟು!!! ತಿಂದ ಉಪ್ಪಿಟ್ಟು ಕರಗಿಸಲು ಶಂಕರ ಪೀಠಕ್ಕೆ ಪಯಣ. ನಡು ನಡುವೆ ಮಳೆ-ಮಂಜಿನ ಜೂಟಾಟ. ಕಷ್ಟಪಟ್ಟು, ಇಷ್ಟಪಟ್ಟು ಕೊನೆಗೂ ಮುಟ್ಟಿದ ಶಂಕರ ಪೀಠ. ಅಲ್ಲಿಂದ ಸ್ವರ್ಗ ಒಂದೇ ಗೇಣು!!!
ಇಳಿಯಲು ಮನಸಿಲ್ಲದಿದ್ದರೂ ಇಳಿದು, ಶಂಕರ ಭಟ್ಟರು ಹೇಳಿದ ಅವರ ಡಾಕ್ಟರಿಗೆ ಮುಚ್ಚಿದ ಬಾಗಿಲಲ್ಲೇ ನಿಂತು ಕೈ ಮುಗಿದು ಮತ್ತದೇ ಅನ್ನ, ಸಾರು, ಹಪ್ಪಳ!!! ಅಲ್ಲಿಂದ ಹೊರಟಿದ್ದು ಎದೆ ನಡುಗಿಸುವ ಇಡ್ಲುಮನೆ ಜಲಪಾತ. ಸತ್ತೇ ಹೋಗ್ತಿವಿ ಅಂದುಕೊಂಡವರು ಜೀವಂತವಾಗಿ ಹೋಗಿ ನಿಂತಿದ್ದು ಮಲೆನಾಡಿನ ನಿಟ್ಟೂರು!!! ಕರೆದ ರಾಘುವಿನ ಮನೆಯಲಿ ಉಳಿದು ಉಂಡಿದ್ದು ಮೀನು ಸಾರು - ಫಾರಂ ಕೋಳಿ!!! ಮಲೆನಾಡಿನ ತಪ್ಪಲಲ್ಲೊಂದು ಅದ್ಭುತ ರಾತ್ರಿ. ಇಲ್ಲಿ ಬಿಚ್ಚಿಕೊಂಡ ಹಗಲು ಇನ್ನೊಂದು ಲೋಕದ ಬೆರಗು!!! ಸತತ ಎರಡು ದಿನಗಳ ನಂತರದ ಬಿಸಿನೀರು ಸ್ನಾನ. ಗಡಿಬಿಡಿಯಲಿ ತಿಂದ ಎರಡು ಇಡ್ಲಿ. ಓಡೋಡಿ ಏರಿದ ವಿನಾಯಕ ಬಸ್ಸು ದಾಟಿದ್ದು ಶರಾವತಿಯ ಹಿನ್ನಿರಿನಲ್ಲಿದ್ದ ಲಾಂಚು! ಲಾಂಚು ದಾಟಿ ಕಾಲಿಟ್ಟರೆ ಸಾಗರ. ಹಾಲಪ್ಪನನು ನೆನಪಿಸಿಕೊಳ್ಳುತ್ತಾ ಏರಿದ್ದು ಜೋಗದ ಬಸ್ಸು. ನಿಂತಿದ್ದು ಜಗದ್ವಿಖ್ಯಾತ ಜೋಗ!!!
ಇಳಿದು ತಿಂದಿದ್ದು ಬ್ರೆಡ್ಡು- ಆಮ್ಲೇಟು. ಶರಾವತಿ ನಿಸರ್ಗ ಧಾಮದ ಟೆನ್ಟಿನಲಿ ನಾರಾಯಣಪ್ಪ ಕೊಟ್ಟ ಟೀ ಕುಡಿದು ಮಲಗಿದಾಗ ಮದ್ಯಾನ್ಹ ಒಂದು ಘಂಟೆ.
ಎದ್ದಿದ್ದು ಸಾಯಂಕಾಲ ಐದು. ಅಮೆಲೊಂದು ಚಿಕ್ಕ ವಾಕ್. ಟೆನ್ಟಿನಲ್ಲೊಂದು ತಂಪಾದ ರಾತ್ರಿ. ಬೆಳಿಗ್ಗೆ ಎದ್ದು ಕಣ್ ಬಿಟ್ಟರೆ ದುಮ್ಮಿಕ್ಕಿ ಹರಿಯುವ ಶರಾವತಿ! ನಾವು ಶರಾವತಿಯ ದಿವ್ಯ ಸಾನಿಧ್ಯದಲಿ ಮೂಕವಿಸ್ಮಿತ ಪಕ್ಷಿ.
ತಿರುಗಿ ಬಂದ ತಾಳಗುಪ್ಪದಲಿ ಬೇರೆಯಾದ ಜೋಡಿ. ಒಂದು ಉತ್ತರ ದೃವ, ಒಂದು ದಕ್ಷಿಣ ದೃವ. ಬೆಳಿಗ್ಗೆ ಎದ್ದು ನೋಡಿದರೆ ಅದೇ ಮನುಷ್ಯ ವಾಸನೆಯ ಬೆಂಗಳೂರು ಛೇ.