ಭಾನುವಾರ, ಜನವರಿ 30, 2011

ಆ ದಿನಗಳ ನೆನಪಿನೊಂದಿಗೆ...

ಸೋನು,
ಅಕ್ಕ ಫೋನ್ ಮಾಡಿದ್ಲು. ಚನ್ನಾಗಿದ್ದಾಳಂತೆ. ಆರು ತಿಂಗಳ ಬಸುರಿ. ನಿಧಾನವಾಗಿ ಅವಳಲ್ಲೊಬ್ಬ ತಾಯಿ ರೂಪಗೊಳ್ಳುತ್ತಿದ್ದಾಳೆ!! ಮಾತಾಡ್ತಾ ಆಡ್ತಾ ಆ ದಿನಗಳನ್ನ ನೆನಪಿಸಿಕೊಂಡೆವು. ಕಣ್ಣುಗಳೆಕೋ ಮಂಜು ಮಂಜು. 'ಮೊದಲಿನ ಬಿರುಸು, ಸೊಗಸು ಎರಡೂ ಕಮ್ಮಿಯಾಗಿದೆ ಅನಿಸ್ತಿದೆ ಕಣೋ' ಅಂದ್ಲು. ಅವಳಿಗೇನು ಗೊತ್ತು? ಬದುಕಿನ ಎರಡೂ ಚಕ್ರ ಕಳಚಿದ ಬಂಡಿ ನಾನು ಅಂತ.
ಮತ್ತದೇ ಮಾತು, ಅದೇ ರಾಗ ಏನಾಗಿತ್ತು? ಯಾಕೆ ಬೇರೆಯಾದ್ರಿ? ಸಾವಿನ ಮನೆಯಲ್ಲಿ ಕುಳಿತು ಜೀವ ಹೋಗಿದ್ದು ಹೇಗೆ? ಎಂದು ಕೇಳಿದಂತಿತ್ತು. 'ಅವಳೇಕೆ ನಿನ್ನ ಬಿಟ್ಟು ಹೋದಳು?' ಎಂದು ಪಿಡಿಸಿ ಕೇಳುವ ಈ ಜಗತ್ತಿಗೆ ಹೇಳಲು At lest ಒಂದು ಉತ್ತರವನ್ನಾದ್ರೂ ಉಳಿಸಿ ಹೋಗಬೇಕಿತ್ತು ನೀನು!!
ದಟ್ಟ ಅಡವಿಯಲಿ ದಾರಿ ತಿಳಿಯದವನನ್ನು ಬಿಟ್ಟು ಹೋಗುವ ಮುನ್ನ ಕೊಂಚ ಯೋಚಿಸಬೇಕಿತ್ತು. ಅವಳೊಂದಿಗೆ ಮಾತನಾಡುಅಷ್ಟು ಹೊತ್ತೂ ಎದೆಯ ಮೂಲೆಯಲ್ಲೆಲ್ಲೋ ತಡೆಹಿಡಿದ ನೋವು ಒಸರುತ್ತಿತ್ತು ರಕ್ತದೊಂದಿಗೆ. ಬದುಕು ಎಷ್ಟು ಬೇಗ ಬದಲಾಯಿತು ನೋಡು, ಸತ್ತೆ ಹೋಗಬೇಕು ಅಂದುಕೊಂಡೋನು ಬದುಕಿಯೇ ಇದ್ದೇನೆ! ಮುಗಿದೇ ಹೋಯಿತು ಅಂದುಕೊಂಡೋರ ಬದುಕು ಮತ್ತೆ ಚಿಗುರುತಿದೆ! ಕಾಲದ ಕೈಯಲ್ಲಿ ಎಲ್ಲವೂ ಅಯೋಮಯ.
ನಿಂತು ನೋಡಿದರೆ ಇಡೀ ಜಗತ್ತು ಓಡುತಿದೆ. ಆದರೆ ಯಾವುದರತ್ತ? ಬದುಕಿನತ್ತಲೋ? ಸಾವಿನತ್ತಲೋ? ನಾವು ಇಷ್ಟೆಲ್ಲಾ ಮಾಡುತಿರುವದು ನೆಮ್ಮದಿಯ ಬದುಕಿಗೋ? ಸಾವಿಗೋ? ಗೊತ್ತಿಲ್ಲ. ಯಾವುದನ್ನೂ ನಿರ್ಧರಿಸಲಾಗದ ಗೊಂದಲ. ಯಾಕೆ 'ನೀವಿಬ್ಬರೂ ಬೇರೆಯಾದ್ರಿ?' ಎಂದು ಚುಚ್ಚಿ ಕೇಳುವ ಈ ದುಷ್ಟ ಪ್ರಪಂಚಕ್ಕೆ "ಬೇರೆಯಾಗಿದ್ದು ಇಬ್ಬರಲ್ಲ, ಅವಳೊಬ್ಬಳೆ. ನಾನಿನ್ನು ಅವಳು ಬಿಟ್ಟು ಹೋದ ಅದೇ ಜಾಗದಲ್ಲಿದ್ದೇನೆ - ದೋಣಿಗೆ ಕಾಯುವ ದಂಡೆಯಂತೆ'' ಅಂತ ಕಿರುಚಿ ಹೇಳೋಣ ಅನಿಸ್ತಿದೆ ಆದರೆ ಈ ಜಗತ್ತಿಗೆ ಕಿವಿಯಿಲ್ಲ, ಕೇವಲ ಬಾಯಿ ಮಾತ್ರ!!
ಎದ್ದು ಹೋಗಿ ಇಷ್ಟು ದಿನಗಳಾದರೂ ನಿನ್ನ ಉಸಿರು, ಘಮ, ಬಿಸುಪು, ಹೆಜ್ಜೆಸದ್ದು, ಕಿರುನಗೆ, ಹುಸಿಗೋಪ ಯಾವುದು ಮರೆಯಾಗಿಲ್ಲ! ಅದೆಲ್ಲ ಇನ್ನೂ ಹಾಗೆ ಇದೆ: ವೀಣೆ ಮಿಟಿದ ಎಷ್ಟೋ ಹೊತ್ತಿನ ನಂತರವೂ ಉಳಿಯುವ ಕಂಪನದಂತೆ!!
ಮನುಷ್ಯ ಮೇಲ್ ಐಯ್ ಡಿ, ಫೋನ್ ನಂಬರ್, ಅಡ್ರೆಸ್, ಬದುಕಿನ ರೀತಿ ಹೀಗೆ ಎಲ್ಲವನ್ನೂ ಬದಲಿಸಿಕೊಳ್ಳಬಹುದು. ಆದರೆ ಮನದ ಭಾವ? ಊಹು೦... ಭಾವಕ್ಕೆ ಲಾಜಿಕ್ ಗೊತ್ತಿಲ್ಲ. ಅದು ಯಾವ ಗಣಿತದ ಸಿದ್ದ ಸೂತ್ರಕ್ಕೂ ಸಿಕ್ಕದ ಮಾಯಾವಿ!! ದಟ್ಟ ಸಂತೋಷದ ಘಳಿಗೆಯಲ್ಲಿದಾಗಲೂ ಯಾವುದೋ ನೋವಿಗೆ ಕಣ್ಣಿರು ಬರಿಸುತ್ತೆ. ದುಖದ ನಟ್ಟ ನಡುವಿದ್ದರೂ ತುಟಿಯ ಮೇಲೊಂದು ಕಿರುನಗೆ ಅರಳಿಸುತ್ತೆ.
ಹುಚ್ಚಿ,
ಇವತ್ತಿನ ಈ ಕ್ಷಣದವರೆಗಿನ ಎಲ್ಲವನ್ನೂ delete ಮಾಡಿ reinstall ಮಾಡಿ ಬಿಡೋಣ ಅನ್ನೋದಕ್ಕೆ ಹೃದಯವೇನು computeraa? ಅದು ನೂರು ಕಂಪ್ಯೂಟರ್ ಗಳನ್ನು ಸೃಷ್ಟಿಸಿದರೂ ಕ್ಷಣಕ್ಕೊಂದು ಭಾವಕ್ಕೆ ದನಿ ತೆರೆದು ಹಾಡುವ ನಿತ್ಯ ಗಾಯಕ!! ಅಂಥ ಭಾವ ಸೃಷ್ಟಿಸೋ ಹೃದಯ ನೀನು ಬಂದೆ ಬರ್ತಿಯಾ ಎಂಬ ದಿವ್ಯ ನಿರೀಕ್ಷೆಯಲ್ಲೇ ಇದೆ: ಮೊದಲ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ!!!

ಭಾನುವಾರ, ಜನವರಿ 09, 2011

ದೂರ ತೀರ ಯಾನ...

ಹುಡುಗೀ,
ಯಾಕೋ ಕಳವಳಗೊಂಡಿದ್ದೇನೆ. ನಿನ್ನ ಮರೆಯುತ್ತಿದ್ದೆನಾ? ಇತ್ತೀಚಿಗೆ ಯಾಕೋ ಹಾಗನಿಸುತ್ತಿದೆ. ಬದುಕೆಂಬ ಇಡೀ ದಿನದ ಗುನಗುವ ಹಾಡಾಗಬೇಕಾದವಳು, ಎಷ್ಟು ನೆನಪಿಸಿಕೊಂಡರೂ ತುಟಿಗೆ ಬರದೆ ಎದೆಯಲ್ಲೇ ಉಳಿದು ಹೋಗುವ ಪಲ್ಲವಿಯಂತಾದೆಯ? ಗೊತ್ತಿಲ್ಲ!
ಪ್ರತಿ ಸಂಬಂಧಕ್ಕೂ ಒಂದು ಆಯುಷ್ಯ ವಿರುವಂತೆ, ನೋವಿಗೂ ಆಯುಷ್ಯ ವಿರುತ್ತದಾ? ನೀನು ತುಳಿದು ಹೋದ ಎದೆಯ ಮೇಲೆ ಹೊಸ ಗರಿಕೆ ಮೂಡುತ್ತಿದೆಯಾ? ಕಾಲದ ಹೊಡೆತಕ್ಕೆ ಸಿಕ್ಕು ಕರಗಿ ಹೋಗುವ ಚರಾ ಚರ ವಸ್ತುಗಳಲಿ ನೀನೂ ಸೇರಿದೆಯಾ? ಸುಖದ ಅಮಲಿನಲ್ಲಿದ್ದ ಮನುಷ್ಯ ಎಲ್ಲವನ್ನು ಬಲು ಬೇಗ ಮರೆತು ಬಿಡುತ್ತಾನಂತೆ: ನಾನೀಗ ಸುಖದಲ್ಲಿದ್ದೆನಾ? ಉಹೂ... ನಿರ್ಧರಿಸಲಾಗುತ್ತಿಲ್ಲ!
ಬೇಸಿಗೆಯ ಖಾಲಿ ಮದ್ಯಾಹ್ನ ದಂತಿದ್ದ ಬಾಳಲ್ಲಿ ಇಳಿ ಸಂಜೆಯ ತಂಗಾಳಿಯಂತೆ ನಡೆದು ಬಂದವಳು ನೀನು. ನೀನಿದ್ದ ಕಾಲ ನನ್ನ ಬದುಕಿನ ಸುವರ್ಣಯುಗ! ನೀನು ಕೊಟ್ಟ ಪ್ರೀತಿ, ಮಮತೆ, ಕಾಳಜಿ, ಅಕ್ಕರೆಗೆ ನಾನು ಸದಾ ಋಣಿ. ಇದ್ದ ಎರಡು ವರ್ಷಗಳ ಕಾಲ ನೀನು ನನ್ನ ಬೆಳೆಸಿದೆಯಾ? ನಾನು ನಿನ್ನ ಬೆಳೆಸಿದೆನಾ? ಅಥವಾ ಪ್ರೀತಿ ನಮ್ಮಿಬ್ಬರನ್ನೂ ಬೆಳೆಸಿತಾ? ಗೊತ್ತಿಲ್ಲ. ಎರಡು ವರ್ಷಗಳ ದಿವ್ಯ ಅನುಭೂತಿಯ ಜೊತೆಗೆ ಬರಸಿಡಿಲಿನಂತಹ ಅಪವಾದದೊಂದಿಗೆ ಎದ್ದು ಹೋದೆಯಲ್ಲ; ಅವತ್ತೇ ಬದುಕಿನ ಮಹತ್ವದ ಪಾಠ ಕಲಿತುಬಿಟ್ಟೆ!!
Anyway, ಯಾವುದೊ ಮಾಮರದ ಚಿಗುರು ತಿಂದ ಕೋಗಿಲೆಯ ಇಪಾದ ದ್ವನಿಯಂತೆ ನನ್ನ ಬಾಳು ಪೂರ್ತಿ ನಿನ್ನ ನೆನಪಿದ್ದರೂ, ಮರೆತ ದಾರಿಯ ದೂರದ ಪ್ರಯಾಣಿಕನಂತೆ ನಡೆದು ಹೊರಟಿದ್ದೇನೆ. ಮನದ ಮೂಲೆಯಲ್ಲಿ ಒಣಗಿ ಸೊರಗಿದ ಕೊರಡು ಕೊನರುವ ಸೂಚನೆ. ಅಲ್ಲಿ ಮತ್ತೆ ಹಾಡುಗಳ ಕಲರವ. ಚುಕ್ಕಿಗಳ ರಂಗವಲ್ಲಿ. ಸಡಗರದ ತೋರಣ. ಖುಷಿಯ ಚಿತ್ತಾರ. ಯಾವುದೋ ಮಾಯೆಗೆ ತನ್ನ ದಾರಿಯನ್ನು ಬಿಟ್ಟು ಹೋದ ಬಂಡಿ ತಿರುಗಿ ಹಳಿಗೆ ಬಂದಂತೆ: ಮತ್ತೆ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸುತ್ತಿದ್ದೇನೆ. ನಡೆವ ದಾರಿಯ ದೂರ ಅಗಾಧ. ಈ ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ನಿನ್ನ ನೆನಪಿರುತ್ತೆ; ಕಾಲಿನಲ್ಲಿ ಬರದೆ ಉಳಿದು ಹೋದ ಮುಳ್ಳಿನ ತುದಿಯಂತೆ!!

ಕೊರಡು ಕೊನರುತಿದೆ...

ದಿಕ್ಕು ತಪ್ಪಿದ ಪ್ರಯಾಣಿಕನಂತೆ
ನಿಂತೇ ಇದ್ದೆ ದುಷ್ಟ
ಬದುಕಿನ ಒಬ್ಬಂಟಿ ನಿಲ್ದಾಣದಲಿ
ಯಾವ ನಿರ್ಧಾರವು
ಬದಲಿಸಲಾಗದ ಅಸ್ತಿಪಂಜರದಂತೆ
ಯಾವ ಮಾಯೆಯೋ
ಯಾವ ಮರುಳೋ
ತುಂಬಿ ಬರುತಿದೆ ಹರುಷ
ಮನದ ಬಾನಂಗಳದಲಿ
ಕಳೆದ ದಾರಿ ಸಿಕ್ಕ
ಖುಷಿಯಲಿ ಹೃದಯ
ಹಾಡುತಿದೆ ಸಾರಿ
ಕನಸು ಕಾಣುವ ಕಣ್ಣಿಗೆ ಕನ್ನಡಕ
ಆದರೂ ಕನಸು ಮಂಜಾಗಿಲ್ಲ
ಕಣ್ಣಿರುವ ಈ ಕುರುಡನಿಗೂ
ಕಾಣುವ ತಿಳಿಮುಗಿಲ
ಕಾಮನಬಿಲ್ಲು
ಅದಕ್ಕೆ ಇರಬೇಕು,
ಕೊರಡು ಕೊನರಿದ ಘಮಲು