ಬುಧವಾರ, ಮಾರ್ಚ್ 23, 2011

ಭಗ್ನ ಪ್ರೇಮಿ

"ನವಿಲೂರಿನ ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು..."

ಶನಿವಾರ, ಮಾರ್ಚ್ 12, 2011

ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!!


ಸೋನು,

ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು.

ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ಸಂಯಮ? ಪಡೆದ ಮುತ್ತು? ಕೊಟ್ಟ ಮುತ್ತು? ಪರಸ್ಪರ ತಿನಿಸಿಕೊಂಡ ತುತ್ತುಗಳು? ಇಬ್ಬರೇ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು?

ಹೇಳು ಇದ್ಯಾವುದೂ ನಿನಗೆ ನೆನಪಾಗುತ್ತಿಲ್ಲವೆ?

ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!! ನಿನ್ನ ವಿನಾಕಾರಣ ಪ್ರೀತಿಸಿದವನು ನಾನು. ಕಾರಣವಿಲ್ಲದೇ ದೂರ ಹೋಗುತ್ತಿರುವವಳು ನೀನು. "ಹೇಳೀ ಹೋಗು ಕಾರಣ" ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು, ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತಹ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು!!!

ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಬದುಕು ಬಂಗಾರವಾಗಲಿ.
ಗುಡ್ ಬೈ

ಸೋಮವಾರ, ಫೆಬ್ರವರಿ 14, 2011

Happy valentine's day...

ಮತ್ತೊಂದು ಪ್ರೇಮಿಗಳ ದಿನ...
ಬದುಕಿನ ನೂರು ಜಂಜಡಗಳ ಮದ್ಯೆ, ದಿನವು ಇಷ್ಟಿಷ್ಟೇ ಮುಗಿದು ಹೋಗುವ ನಮ್ಮೆಲ್ಲ ಯೌವನವನ್ನು ನವೀಕರಿಸಲು ಮತ್ತೆ ಬಂದಿದೆ ಈ ದಿನ. ನಮ್ಮ ಅನುಭವಕ್ಕೆ ಬರುವ ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸೋಣ...
Love u!!!

ಶನಿವಾರ, ಫೆಬ್ರವರಿ 05, 2011

ಎದ್ದು ಹೋದವಳಿಗೊಂದು ಮುದ್ದಾದ ಪತ್ರ!!


ಸೋನು,
ಪ್ರಪೋಸ್ ಮಾಡದೇ ಶುರುವಾದ ಪ್ರೇಮ ನಮ್ಮದು! ಹೌದು ಪ್ರಪೋಸ್ ಮಾಡಿ ತೂಕ, ಅಳತೆ ಹಾಕಿ ಮಾಡೋದಕ್ಕೆ ಇದೇನು ಈರುಳ್ಳಿ ವ್ಯಾಪಾರವಾ? ಇಲ್ಲಾ ರಿಯಲ್ ಎಸ್ಟೇಟ್ ಬುಸಿನೆಸ್ಸಾ? ತಾಯಿ ಮಡಿಲಲ್ಲಿ ಬೆಚ್ಚಗೆ ಮಲಗಿದ ಹಸುಗೂಸು ನಿದ್ದೆಯಲ್ಲೇ ನಗುವ ಪರಿಯಂತೆ; ಹುಚ್ಚು ಹೃದಯ ಬೆಚ್ಚಗಾಗುವ ಆ ಕ್ಷಣ ಹೊತ್ತು ಯಾರಿಗೆ ಗೊತ್ತು?
ಒಂದು ಸುಂದರ ಸಂಜೆಯ ಜಡಿಮಳೆಯಲಿ ಯಾವುದೋ ಜನ್ಮದ ಒಪ್ಪಂದದ ಮುಂದುವರೆದ ಭಾಗವಾಗಿ ನಾವಿಬ್ಬರು ಸಿಕ್ಕೆವು! ನೋಡಿದ ಮರುಕ್ಷಣದಿಂದ ಬದುಕಿನ ಎಲ್ಲ ಕಾರ್ಮೋಡಗಳು ಸರಿದು ಮೂಡಿದ್ದು ಪ್ರೀತಿಯ ಕಾಮನಬಿಲ್ಲು! ಪ್ರೀತಿಸೋದಕ್ಕೆ ಕಾರಣ ಬೇಕಾ? never! ಕಾರಣವಿಲ್ಲದೆ ಹುಟ್ಟುವದೆ ನಿಜವಾದ ಪ್ರೀತಿ. ಕಾರಣ ಇಟ್ಟುಕೊಂಡು ಹುಟ್ಟೋದಕ್ಕೆ ಅದೇನು ಭಾರತದ ಪಾಪುಲೆಶನ್ನಾ?
ಹುಚ್ಚಿ, ಅದು ಕಲ್ಲು ಕರಗುವ ಸಮಯ, ತಾಯಿ ಹಕ್ಕಿ ಗುಟುಕು ಹಾಕುವ ಸಮಯ, ಹಾಳು ಬೆಳದಿಂಗಳು ಸಮುದ್ರದಲಿ ಲೀನವಾಗುವ ಸಮಯ, ಅದು, ಬಯಸಿದ ಮನಸುಗಳು ಒಂದಾಗುವ ಸಮಯ! ನಾವು ಒಂದಾಗಿದ್ದು ಹಾಗೆ ಅಲ್ಲವಾ? ದಟ್ಟ ಕಾನನದಲಿ ಕಳೆದು ಹೋದವನಿಗೆ ಸಿಕ್ಕ ದಾರಿಯಂತೆ, ಕಾರ್ಗತ್ತಲಿನಲ್ಲಿ ಬೆಪ್ಪಾಗಿ ನಿಂತವನಿಗೆ ಕಂಡ ಬೆಳಕ ಬೀಜದಂತೆ. ಎಷ್ಟು ಅದ್ಭುತವಾಗಿದ್ದವು ಆ ದಿನಗಳು! ಕುಡುಕ ಡ್ರೈವರ್ ನ ಕೈಗೆ ಸಿಕ್ಕ ಹೊಚ್ಚ ಹೊಸ ಲಾರಿಯಂತೆ! ಎಂಥ ವೇಗ, ಎಂಥ ಬಿರುಸು, ಎಂಥ ಸೊಗಸು. ಹಾಗೆ ಬದುಕಿನ ಸುವಿಶಾಲ ಹೆದ್ದಾರಿಯಲಿ ಹುಮ್ಮಸ್ಸಿನಲ್ಲಿ ಓಡುತ್ತಿದ್ದವನಿಗೆ Road under construction ಬೋರ್ಡು ಕಣ್ಣಿಗೆ ಬಿತ್ತು ನೋಡು ಸ್ಪಾನರ್ ಇಲ್ಲದೆ ಕಳಚಿ ಬಿದ್ದ ಬೋಲ್ಟ್ ನಂತಾದೆ! ಹೃದಯದ ರಿಪೇರಿಗೆ ಯಾವ ಸ್ಪಾನರು? ನೀನಿಲ್ಲದ ಈ ಬದುಕಲಿ ಅದ್ಭುತ ಮೆಕ್ಯಾನಿಕ್ ನೋಬ್ಬನಿಗಾಗಿ ಕಾಯುವ ಲಟಾರಿ ಲಾರಿಯಂತಾಗಿದ್ದೇನೆ!
ಹುಡುಗೀ, ಪ್ರತಿ ಸಿಟ್ಟಿಗೂ ಒಂದು ಆಯುಷ್ಯವಿರುತ್ತದಂತೆ! ಒಬ್ಬ ಬುದ್ದಿವಂತ ಜೀವನ ಪೂರ್ತಿ ದ್ವೇಷಿಸಬಹುದು ಆದರೆ ಹೃದಯವಂತ? ಊಹು೦... ಅದೇನು ಜನ್ಮ ಪೂರ್ತಿ ಜೊತೆಗಿರಲು ಹೃದಯ ಬಯಸಿದ ಪ್ರೀತಿಯಾ? ಬಿ.ಪಿ ಶುಗರ್ ಬರಿಸೋ ಕೆಟ್ಟ ಸಿಟ್ಟು! ಕುಳಿತು ಯೋಚಿಸಿದರೆ ಕೂಡಿ ಬಾಳಲು ಸಾವಿರ ಕಾರಣ ಸಿಕ್ಕಾವು. ನಾವು ಹಾಡಬೇಕಿದ್ದ ಹಾಡುಗಳು ಕೊರಳ ತುದಿಯಲ್ಲೇ ಮಡಿದಾವು. ಹರವಿ ಆನಂದಿಸುವ ಕನಸುಗಳು ಕಮರಿ ಹೋದಾವು. ಈ ಅಗಾಧ ಬದುಕಿನ ಉಳಿದ ಅವಧಿಗೆ ನೀನೆ ಬೇಕು. ಆ ಸಿಟ್ಟು ಬಿಟ್ಟಾಕಿ ಒಟ್ಟಿಗೆ ಬಾಳೋಣ ಬಂದು ಬಿಡು ಬೇಗ.
ಈ ಪ್ರೇಮಿಗಳ ದಿನದ ದಿವ್ಯ ಘಳಿಗೆಯಲಿ ಮತ್ತೆ ಪ್ರಪೋಸ್ ಮಾಡ್ತಿದೀನಿ...
I LOVE YOU...

ಭಾನುವಾರ, ಜನವರಿ 30, 2011

ಆ ದಿನಗಳ ನೆನಪಿನೊಂದಿಗೆ...

ಸೋನು,
ಅಕ್ಕ ಫೋನ್ ಮಾಡಿದ್ಲು. ಚನ್ನಾಗಿದ್ದಾಳಂತೆ. ಆರು ತಿಂಗಳ ಬಸುರಿ. ನಿಧಾನವಾಗಿ ಅವಳಲ್ಲೊಬ್ಬ ತಾಯಿ ರೂಪಗೊಳ್ಳುತ್ತಿದ್ದಾಳೆ!! ಮಾತಾಡ್ತಾ ಆಡ್ತಾ ಆ ದಿನಗಳನ್ನ ನೆನಪಿಸಿಕೊಂಡೆವು. ಕಣ್ಣುಗಳೆಕೋ ಮಂಜು ಮಂಜು. 'ಮೊದಲಿನ ಬಿರುಸು, ಸೊಗಸು ಎರಡೂ ಕಮ್ಮಿಯಾಗಿದೆ ಅನಿಸ್ತಿದೆ ಕಣೋ' ಅಂದ್ಲು. ಅವಳಿಗೇನು ಗೊತ್ತು? ಬದುಕಿನ ಎರಡೂ ಚಕ್ರ ಕಳಚಿದ ಬಂಡಿ ನಾನು ಅಂತ.
ಮತ್ತದೇ ಮಾತು, ಅದೇ ರಾಗ ಏನಾಗಿತ್ತು? ಯಾಕೆ ಬೇರೆಯಾದ್ರಿ? ಸಾವಿನ ಮನೆಯಲ್ಲಿ ಕುಳಿತು ಜೀವ ಹೋಗಿದ್ದು ಹೇಗೆ? ಎಂದು ಕೇಳಿದಂತಿತ್ತು. 'ಅವಳೇಕೆ ನಿನ್ನ ಬಿಟ್ಟು ಹೋದಳು?' ಎಂದು ಪಿಡಿಸಿ ಕೇಳುವ ಈ ಜಗತ್ತಿಗೆ ಹೇಳಲು At lest ಒಂದು ಉತ್ತರವನ್ನಾದ್ರೂ ಉಳಿಸಿ ಹೋಗಬೇಕಿತ್ತು ನೀನು!!
ದಟ್ಟ ಅಡವಿಯಲಿ ದಾರಿ ತಿಳಿಯದವನನ್ನು ಬಿಟ್ಟು ಹೋಗುವ ಮುನ್ನ ಕೊಂಚ ಯೋಚಿಸಬೇಕಿತ್ತು. ಅವಳೊಂದಿಗೆ ಮಾತನಾಡುಅಷ್ಟು ಹೊತ್ತೂ ಎದೆಯ ಮೂಲೆಯಲ್ಲೆಲ್ಲೋ ತಡೆಹಿಡಿದ ನೋವು ಒಸರುತ್ತಿತ್ತು ರಕ್ತದೊಂದಿಗೆ. ಬದುಕು ಎಷ್ಟು ಬೇಗ ಬದಲಾಯಿತು ನೋಡು, ಸತ್ತೆ ಹೋಗಬೇಕು ಅಂದುಕೊಂಡೋನು ಬದುಕಿಯೇ ಇದ್ದೇನೆ! ಮುಗಿದೇ ಹೋಯಿತು ಅಂದುಕೊಂಡೋರ ಬದುಕು ಮತ್ತೆ ಚಿಗುರುತಿದೆ! ಕಾಲದ ಕೈಯಲ್ಲಿ ಎಲ್ಲವೂ ಅಯೋಮಯ.
ನಿಂತು ನೋಡಿದರೆ ಇಡೀ ಜಗತ್ತು ಓಡುತಿದೆ. ಆದರೆ ಯಾವುದರತ್ತ? ಬದುಕಿನತ್ತಲೋ? ಸಾವಿನತ್ತಲೋ? ನಾವು ಇಷ್ಟೆಲ್ಲಾ ಮಾಡುತಿರುವದು ನೆಮ್ಮದಿಯ ಬದುಕಿಗೋ? ಸಾವಿಗೋ? ಗೊತ್ತಿಲ್ಲ. ಯಾವುದನ್ನೂ ನಿರ್ಧರಿಸಲಾಗದ ಗೊಂದಲ. ಯಾಕೆ 'ನೀವಿಬ್ಬರೂ ಬೇರೆಯಾದ್ರಿ?' ಎಂದು ಚುಚ್ಚಿ ಕೇಳುವ ಈ ದುಷ್ಟ ಪ್ರಪಂಚಕ್ಕೆ "ಬೇರೆಯಾಗಿದ್ದು ಇಬ್ಬರಲ್ಲ, ಅವಳೊಬ್ಬಳೆ. ನಾನಿನ್ನು ಅವಳು ಬಿಟ್ಟು ಹೋದ ಅದೇ ಜಾಗದಲ್ಲಿದ್ದೇನೆ - ದೋಣಿಗೆ ಕಾಯುವ ದಂಡೆಯಂತೆ'' ಅಂತ ಕಿರುಚಿ ಹೇಳೋಣ ಅನಿಸ್ತಿದೆ ಆದರೆ ಈ ಜಗತ್ತಿಗೆ ಕಿವಿಯಿಲ್ಲ, ಕೇವಲ ಬಾಯಿ ಮಾತ್ರ!!
ಎದ್ದು ಹೋಗಿ ಇಷ್ಟು ದಿನಗಳಾದರೂ ನಿನ್ನ ಉಸಿರು, ಘಮ, ಬಿಸುಪು, ಹೆಜ್ಜೆಸದ್ದು, ಕಿರುನಗೆ, ಹುಸಿಗೋಪ ಯಾವುದು ಮರೆಯಾಗಿಲ್ಲ! ಅದೆಲ್ಲ ಇನ್ನೂ ಹಾಗೆ ಇದೆ: ವೀಣೆ ಮಿಟಿದ ಎಷ್ಟೋ ಹೊತ್ತಿನ ನಂತರವೂ ಉಳಿಯುವ ಕಂಪನದಂತೆ!!
ಮನುಷ್ಯ ಮೇಲ್ ಐಯ್ ಡಿ, ಫೋನ್ ನಂಬರ್, ಅಡ್ರೆಸ್, ಬದುಕಿನ ರೀತಿ ಹೀಗೆ ಎಲ್ಲವನ್ನೂ ಬದಲಿಸಿಕೊಳ್ಳಬಹುದು. ಆದರೆ ಮನದ ಭಾವ? ಊಹು೦... ಭಾವಕ್ಕೆ ಲಾಜಿಕ್ ಗೊತ್ತಿಲ್ಲ. ಅದು ಯಾವ ಗಣಿತದ ಸಿದ್ದ ಸೂತ್ರಕ್ಕೂ ಸಿಕ್ಕದ ಮಾಯಾವಿ!! ದಟ್ಟ ಸಂತೋಷದ ಘಳಿಗೆಯಲ್ಲಿದಾಗಲೂ ಯಾವುದೋ ನೋವಿಗೆ ಕಣ್ಣಿರು ಬರಿಸುತ್ತೆ. ದುಖದ ನಟ್ಟ ನಡುವಿದ್ದರೂ ತುಟಿಯ ಮೇಲೊಂದು ಕಿರುನಗೆ ಅರಳಿಸುತ್ತೆ.
ಹುಚ್ಚಿ,
ಇವತ್ತಿನ ಈ ಕ್ಷಣದವರೆಗಿನ ಎಲ್ಲವನ್ನೂ delete ಮಾಡಿ reinstall ಮಾಡಿ ಬಿಡೋಣ ಅನ್ನೋದಕ್ಕೆ ಹೃದಯವೇನು computeraa? ಅದು ನೂರು ಕಂಪ್ಯೂಟರ್ ಗಳನ್ನು ಸೃಷ್ಟಿಸಿದರೂ ಕ್ಷಣಕ್ಕೊಂದು ಭಾವಕ್ಕೆ ದನಿ ತೆರೆದು ಹಾಡುವ ನಿತ್ಯ ಗಾಯಕ!! ಅಂಥ ಭಾವ ಸೃಷ್ಟಿಸೋ ಹೃದಯ ನೀನು ಬಂದೆ ಬರ್ತಿಯಾ ಎಂಬ ದಿವ್ಯ ನಿರೀಕ್ಷೆಯಲ್ಲೇ ಇದೆ: ಮೊದಲ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ!!!

ಭಾನುವಾರ, ಜನವರಿ 09, 2011

ದೂರ ತೀರ ಯಾನ...

ಹುಡುಗೀ,
ಯಾಕೋ ಕಳವಳಗೊಂಡಿದ್ದೇನೆ. ನಿನ್ನ ಮರೆಯುತ್ತಿದ್ದೆನಾ? ಇತ್ತೀಚಿಗೆ ಯಾಕೋ ಹಾಗನಿಸುತ್ತಿದೆ. ಬದುಕೆಂಬ ಇಡೀ ದಿನದ ಗುನಗುವ ಹಾಡಾಗಬೇಕಾದವಳು, ಎಷ್ಟು ನೆನಪಿಸಿಕೊಂಡರೂ ತುಟಿಗೆ ಬರದೆ ಎದೆಯಲ್ಲೇ ಉಳಿದು ಹೋಗುವ ಪಲ್ಲವಿಯಂತಾದೆಯ? ಗೊತ್ತಿಲ್ಲ!
ಪ್ರತಿ ಸಂಬಂಧಕ್ಕೂ ಒಂದು ಆಯುಷ್ಯ ವಿರುವಂತೆ, ನೋವಿಗೂ ಆಯುಷ್ಯ ವಿರುತ್ತದಾ? ನೀನು ತುಳಿದು ಹೋದ ಎದೆಯ ಮೇಲೆ ಹೊಸ ಗರಿಕೆ ಮೂಡುತ್ತಿದೆಯಾ? ಕಾಲದ ಹೊಡೆತಕ್ಕೆ ಸಿಕ್ಕು ಕರಗಿ ಹೋಗುವ ಚರಾ ಚರ ವಸ್ತುಗಳಲಿ ನೀನೂ ಸೇರಿದೆಯಾ? ಸುಖದ ಅಮಲಿನಲ್ಲಿದ್ದ ಮನುಷ್ಯ ಎಲ್ಲವನ್ನು ಬಲು ಬೇಗ ಮರೆತು ಬಿಡುತ್ತಾನಂತೆ: ನಾನೀಗ ಸುಖದಲ್ಲಿದ್ದೆನಾ? ಉಹೂ... ನಿರ್ಧರಿಸಲಾಗುತ್ತಿಲ್ಲ!
ಬೇಸಿಗೆಯ ಖಾಲಿ ಮದ್ಯಾಹ್ನ ದಂತಿದ್ದ ಬಾಳಲ್ಲಿ ಇಳಿ ಸಂಜೆಯ ತಂಗಾಳಿಯಂತೆ ನಡೆದು ಬಂದವಳು ನೀನು. ನೀನಿದ್ದ ಕಾಲ ನನ್ನ ಬದುಕಿನ ಸುವರ್ಣಯುಗ! ನೀನು ಕೊಟ್ಟ ಪ್ರೀತಿ, ಮಮತೆ, ಕಾಳಜಿ, ಅಕ್ಕರೆಗೆ ನಾನು ಸದಾ ಋಣಿ. ಇದ್ದ ಎರಡು ವರ್ಷಗಳ ಕಾಲ ನೀನು ನನ್ನ ಬೆಳೆಸಿದೆಯಾ? ನಾನು ನಿನ್ನ ಬೆಳೆಸಿದೆನಾ? ಅಥವಾ ಪ್ರೀತಿ ನಮ್ಮಿಬ್ಬರನ್ನೂ ಬೆಳೆಸಿತಾ? ಗೊತ್ತಿಲ್ಲ. ಎರಡು ವರ್ಷಗಳ ದಿವ್ಯ ಅನುಭೂತಿಯ ಜೊತೆಗೆ ಬರಸಿಡಿಲಿನಂತಹ ಅಪವಾದದೊಂದಿಗೆ ಎದ್ದು ಹೋದೆಯಲ್ಲ; ಅವತ್ತೇ ಬದುಕಿನ ಮಹತ್ವದ ಪಾಠ ಕಲಿತುಬಿಟ್ಟೆ!!
Anyway, ಯಾವುದೊ ಮಾಮರದ ಚಿಗುರು ತಿಂದ ಕೋಗಿಲೆಯ ಇಪಾದ ದ್ವನಿಯಂತೆ ನನ್ನ ಬಾಳು ಪೂರ್ತಿ ನಿನ್ನ ನೆನಪಿದ್ದರೂ, ಮರೆತ ದಾರಿಯ ದೂರದ ಪ್ರಯಾಣಿಕನಂತೆ ನಡೆದು ಹೊರಟಿದ್ದೇನೆ. ಮನದ ಮೂಲೆಯಲ್ಲಿ ಒಣಗಿ ಸೊರಗಿದ ಕೊರಡು ಕೊನರುವ ಸೂಚನೆ. ಅಲ್ಲಿ ಮತ್ತೆ ಹಾಡುಗಳ ಕಲರವ. ಚುಕ್ಕಿಗಳ ರಂಗವಲ್ಲಿ. ಸಡಗರದ ತೋರಣ. ಖುಷಿಯ ಚಿತ್ತಾರ. ಯಾವುದೋ ಮಾಯೆಗೆ ತನ್ನ ದಾರಿಯನ್ನು ಬಿಟ್ಟು ಹೋದ ಬಂಡಿ ತಿರುಗಿ ಹಳಿಗೆ ಬಂದಂತೆ: ಮತ್ತೆ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸುತ್ತಿದ್ದೇನೆ. ನಡೆವ ದಾರಿಯ ದೂರ ಅಗಾಧ. ಈ ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ನಿನ್ನ ನೆನಪಿರುತ್ತೆ; ಕಾಲಿನಲ್ಲಿ ಬರದೆ ಉಳಿದು ಹೋದ ಮುಳ್ಳಿನ ತುದಿಯಂತೆ!!

ಕೊರಡು ಕೊನರುತಿದೆ...

ದಿಕ್ಕು ತಪ್ಪಿದ ಪ್ರಯಾಣಿಕನಂತೆ
ನಿಂತೇ ಇದ್ದೆ ದುಷ್ಟ
ಬದುಕಿನ ಒಬ್ಬಂಟಿ ನಿಲ್ದಾಣದಲಿ
ಯಾವ ನಿರ್ಧಾರವು
ಬದಲಿಸಲಾಗದ ಅಸ್ತಿಪಂಜರದಂತೆ
ಯಾವ ಮಾಯೆಯೋ
ಯಾವ ಮರುಳೋ
ತುಂಬಿ ಬರುತಿದೆ ಹರುಷ
ಮನದ ಬಾನಂಗಳದಲಿ
ಕಳೆದ ದಾರಿ ಸಿಕ್ಕ
ಖುಷಿಯಲಿ ಹೃದಯ
ಹಾಡುತಿದೆ ಸಾರಿ
ಕನಸು ಕಾಣುವ ಕಣ್ಣಿಗೆ ಕನ್ನಡಕ
ಆದರೂ ಕನಸು ಮಂಜಾಗಿಲ್ಲ
ಕಣ್ಣಿರುವ ಈ ಕುರುಡನಿಗೂ
ಕಾಣುವ ತಿಳಿಮುಗಿಲ
ಕಾಮನಬಿಲ್ಲು
ಅದಕ್ಕೆ ಇರಬೇಕು,
ಕೊರಡು ಕೊನರಿದ ಘಮಲು