ನಂಬಿಕೆಗೆ ದ್ರೋಹ ಬಗೆಯುವ
ಸುಂದರ ಪದ
ನನ್ನ ಒಲವಿನ ಜಾನ್ಸ್,
ಬೆಳಗ್ಗೆಯಿಂದ ನಿನಗೆ ಏನೋ ಹೇಳಬೇಕು ಅಂದುಕೊಂಡದ್ದು ಈಗ ನೆನಪಾಯ್ತು ನೋಡು. ಮತ್ತೇನಿಲ್ಲ, ನಂಗೆ ನೀನು ಅಂದ್ರೆ ಇಷ್ಟ. ನಿನ್ನ ಪುಟ್ಟ ಪಾದ ಇಷ್ಟ. ಅದರ ಕಿರುಬೆರಳು ಮುದ್ದು. ಮೈಯ ಮಚ್ಚೆಗೆಲ್ಲ ಒಂದು ಕಡೆಯಿಂದ, ತಲಾ ಒಂದಕ್ಕೆ ನೂರರನಂತೆ ಮುತ್ತಿಟ್ಟುಕೊಂಡು ಬಂದರೆ ಒಟ್ಟಿನಲ್ಲಿ ಎಷ್ಟು ಸಾವಿರವೋ? ನಿನ್ನ ತುದಿಗೋಪ ನಂಗಿಷ್ಟ. ಕಣ್ಣ ಹೊರಳಿಗೆ ಅಲ್ಲೇ ಬಿದ್ದು ಸಾಯ್ತೇನೆ. ಮೈಯ ಮಾಟಕ್ಕೆ ನಿಂತಲ್ಲೇ ಮಟಾಷ್. ಆಕ್ಸಿಡೆಂಟಾಗಿ ಸಾಯುವುದೇ ಹಣೆಯಲ್ಲಿ ಬರೆದಿದ್ದರೆ, ನಿನ್ನ ಹುಬ್ಬಿ ತಿರುವಿನಲ್ಲಿ ಆಗಲಿ ಅಪಘಾತ. ಕೊರಳ ಇಳಿಜಾರಿನಲ್ಲಿ ಸಂಭವಿಸಲಿ ಆಕ್ಸಿಡೆಂಟ್. ತೋಳ ತಿರುವಿನಲ್ಲಿ ಬ್ರೇಕು ಫೇಲಾಗಲಿ. ಕಿಬ್ಬೊಟ್ಟೆಯ ನುಣಿಪಿನಲ್ಲಿ ಸ್ಕಿಡ್ಡಾಗಿ ಹೋದೆನು. ಐ ಲವ್ ಯೂ ಕಣೆ.
ನಾನೇನು ಮಾಡಲಿ? ನೀನು ಯಾರೊಂದಿಗಾದರೂ ಮಾತನಾಡಿದರೆ ನಂಗೆ ಬೇಜಾರಾಗುತ್ತೆ. ಸೋಶಿಯಾಲಜಿ ಮೇಷ್ಟ್ರು, ಪೈನಲ್ ಇಯರ್ ಶಿವು, ಸ್ಪೋರ್ಟ್ಸ್ ಸೆಕ್ರೇಟರಿ ಈರಣ್ಣ ಕಡೆಗೆ ಅಟೆಂಡರ್ ಹನುಮಂತಿವಿನೊಂದಿಗೆ ನೀನು ನಗುನಗುತ್ತಾ ಮಾತನಾಡಿದರೂ,. ಬೆರಳ ತುದಿಗೆ ಚೇಳ ಕುಟುಕು. ನಾನದರೂ ಏನು ಮಾಡಲಿ? ಎ ದಿಲ್ ತೋ ಪಾಗಲ್ ಹೈ….
ಹೀಗೆ ಪೊಸೆಸೀವ್ ಆಗಿರೋದು ತಪ್ಪು. ಎಷ್ಠಾದರೂ ನೀನು ನನ್ನವಳು. ನನ್ನ ಪ್ರೀತಿಗೆ, ವಿನಂತಿಗೆ ಸಮ್ಮತಿ ಸಲ್ಲಿಸಿದವಳು. ನನ್ನನ್ನು ತುಂಬಾಪ್ರೀತಿಸುವಳು. ಇಂದಲ್ಲಾ ನಾಳೆ ಮದುವೆಯಾಗಲಿರುವಳು. ನೀನು ನಾಲ್ಕು ಮಂದಿಯೊಂದಿಗೆ ಮಾತನಾಡಿದರೆ ತಪ್ಪೇನಿದೆ? ನಿಂಗೂ ಒಂದು ಸೋಶಿಯಲ್ ಲೈಫ್ ಬೇಡವಾ? ಗೆಳೆಯರು ಬೇಡವಾ? ನೂನು ಮೊದಲಿನಂತೆಯೇ ಇರಬೇಕು. ನನ್ನ ಪ್ರೀತಿ ನಿನಗೆ ಬಂಧನವಾಗಬಾರದು. ಎಸ್, ಹಾಗಂತೆಲ್ಲಾ ಯೋಚಿಸುತ್ತೇನೆ. ತುಂಬಾ ಸ್ಪುಟವಾಗಿ ಯೋಚಿಸಿ, ಇನ್ಮೇಲಿಂದ ಹಾಗೆಲ್ಲಾ ಪೊಸೆಸೀವ್ ಆಗಿ ಆಡಬಾರದು ಎಂತ ನಿರ್ಧರಿಸುತ್ತೇನೆ. ಆದರೆ ಏನು ಮಾಡಲಿ ಜಾನ್ಸ್? ಮನಸ್ಸು ಲೂಸ್ ಮಾದ! ಬೆಳಗ್ಗೆ ನೀನು ಕಾರಿಡಾರಿನಲ್ಲಿ ನಿಂತು ಕನ್ನಡಕ ಮೇಷ್ಟ್ರು ಜೊತೆಯಲ್ಲಿ ನಗ ನಗ್ತಾ ಮಾತಾಡ್ತಾ ನಿಂತಿದ್ದು ನೋಡಿದೆ. ರಾತ್ರಿ ಯೋಚಿಸಿದ್ದಲ್ಲಾ ಮರೆತು ಹೋಗಿ ಅಂಗಾಲಿನ ಸಿಟ್ಟು ನೆತ್ತಿಗೇರಿಕೊಂಡು ಬಂದು, ಐ ಆಮ್ ಸಾರಿ….ಆ ಹೊತ್ತಿನಲ್ಲಿ ನಾನು ಮನುಷ್ಯನಾಗಿರಲಿಲ್ಲ.
ಜಾನ್ಹವಿ, ನಿನ್ನೊಂದಿಗೆ ತುಂಬಾ ಒರಟಾಗಿ ಮಾತನಾಡಿಬಿಟ್ಟೆ. ಹಾಗೆಲ್ಲಾ ಮಾತನಾಡುವುದು ನನ್ನ ಸ್ವಭಾವವೇ ಅಲ್ಲ. ಮನೆಯಲ್ಲೂ ನಾನು ಉಳಿದೆಲ್ಲರಿಗಿಂತ ಸ್ಮೂತ್ ಫೆಲೋ. ಅಪ್ಪನೆದುರು ನಿಂತು ಪಾಕೆಟ್ ಮನಿ ಕೇಳುವುದಕ್ಕೂ ಅಳಕುತ್ತೇನೆ. ಅಣ್ಣ ನನ್ನ ಪಾಲಿಗೆ ಡೆಡ್ಲಿ. ಅತ್ತಿಗೆಯೊಂದಿಗೂ ನನಗೆ ಅಂತ ಸಲಿಗೆಯಿಲ್ಲ. ಏನು ಮಾಡಲಿ ಹೇಳು, ನನಗೆ ಅಕ್ಕ ತಂಗಿಯರಿಲ್ಲ. ಹಠ ಮಾಡಿ ಮುದ್ದು ಮಾಡಿಸಿಕೊಳ್ಳೋಣವೆಂದರೆ ಚಿಕ್ಕಂದಿನಲ್ಲೇ ಅಮ್ಮ ತೀರಿಹೋದಳು. ಐ ಆಮ್ ಸಾರಿ ಜಾನ್ಸ್, ಅಭದ್ರತೆ ಯೆಂಬುದು ಚಿಕ್ಕಂದಿನಿಂದಲೂ ನನ್ನ ಬೆನ್ನತ್ತಿದ ಪೀಡೆ. ನನಗೆ ಸಿಗಬೇಕಾದ ಪ್ರೀತಿ ಎಲ್ಲಿ ಸಿಗದೇ ಹೋಗುತ್ತದೋ, ಎಲ್ಲಿ ಇನ್ನೊಬ್ಬರ ಪಾಲಾಗುತ್ತದೋ ಅಂತ ಅಟಮಟಿಸುತ್ತೇನೆ. ಈ ಕಾರಣಕ್ಕಾಗಿಯೇ ಮಧ್ಯಾಹ್ನ ನಿನ್ನೊಂದಿಗೆ ಒರಟಾಗಿ ಮಾತನಾಡಿದ್ದು.
ಬೇಸರ ಮಾಡಿಕೊಳ್ಳಬೇಡ ಜಾನ್ಸ್, ನನ್ನ ಸೆಡವು, ನನ್ನ ಮುನಿಸು, ಒರಟು ಮಾತು, ಹಠ, ಜಗಳ ಇವೆಲ್ಲಾ ತುಂಬಾ ತಾತ್ಕಾಲಿಕ. “ನೀನು ನನ್ನವನು, ಫಾರೆವರ್” ಅಂತ ಎದೆಯ ಮೇಲೆ ಒಂದು ಸಲ ನಿನ್ನ ಪುಟ್ಟ ಕೈಯಿಟ್ಟು ಹೇಳು, ಮತ್ತೆ ನಾನು ಬೇರೆಯದೇ ಮನುಷ್ಯ. ಒಂದೇ ಒಂದು ಮುಟಿಗೆಯಷ್ಟು ಪ್ರೀತಿ ಸಿಕ್ಕರೂ ಚಲಿಸಿಹೋಗುವುವನು ನಾನು. ನನಗೆ ತುಂಬಾ ಅತಿರೇಕವೆನಿಸುವಂತಹ ಡಿಮ್ಯಾಂಡ್ ಗಳಿಲ್ಲ. ನೀನು ನನಗೋಸ್ಕರ ಏನೂ ಮಾಡಬೇಕಾಗಿಲ್ಲ. ಒಂದು ಹಿಡಿ ಪ್ರೀತಿ ಕೊಡು; ನಂಗ್ ನಂಗೇ ಅಂತ ಕೊಡು. ನನ್ನದು ಹುಚ್ಚು ಬಡಬಡಿಕೆ ಅನ್ನಿಸಿದರೂ ಸಹನೆಯಿಂದ ಕೇಳಿಸಿಕೋ. ನನ್ನಲ್ಲೊಂದು ವಿಶ್ವಾಸ ಮೂಡಿಸು. “ಬದುಕಿದರೂ ಬಾಳಿದರೂ, ಸತ್ತರೂ, ಸರ್ವನಾಶವಾದರೂ-ಒಟ್ಟಿಗೆ” ಅಂತ ಆಣೆ ಮಾಡು. ಐ ಪ್ರಾಮಿಸ್, ಇನ್ನು ಮೇಲೆ ಯಾವತ್ತೂ ಪೊಸೆಸೀವ್ ಆಗಿ ಆಡುವುದಿಲ್ಲ. ನಿಜ ಹೇಳಬೇಕೆಂದರೆ, ನಿನ್ನ ಬಗ್ಗೆ ಅನುಮಾನ ನನಗೆ ಖಂಡಿಯ ಇಲ್ಲ. ಇವೆಲ್ಲಾ ಹುಚ್ಚು ಮನಸ್ಸಿನ ಆಟ: ಪ್ಲೀಸ್, ನಂಬು.
ನಾಳೆ ಸಿಗೋಣ.
ನಿನ್ನನ್ನು ಎಂದಿನಂತೆಯೇ ಪ್ರೀತಿಸುತ್ತೇನೆ, ಆರಾಧಿಸುತ್ತೇನೆ. ಹೇಯ್ ಜಾನ್ಸ್, ಈ ಜಗತ್ತಿನಲ್ಲಿ ನನಗೆ ಬೇರೆ ಇದ್ದಾರಾದರೂ ಯಾರು ಹೇಳು? ಜಗಳಕ್ಕೂ ನೀನೇ ಬೇಕು: ನಂಗ್ ನಂಗೇ ಬೇಕು. ಇಡಿ ಇಡಿಯಾಗಿ ಬೇಕು.
-ನಿನ್ನವನು.
ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.
ಸೋನು,
ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು.
ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ಸಂಯಮ? ಪಡೆದ ಮುತ್ತು? ಕೊಟ್ಟ ಮುತ್ತು? ಪರಸ್ಪರ ತಿನಿಸಿಕೊಂಡ ತುತ್ತುಗಳು? ಇಬ್ಬರೇ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು?
ಹೇಳು ಇದ್ಯಾವುದೂ ನಿನಗೆ ನೆನಪಾಗುತ್ತಿಲ್ಲವೆ?
ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!! ನಿನ್ನ ವಿನಾಕಾರಣ ಪ್ರೀತಿಸಿದವನು ನಾನು. ಕಾರಣವಿಲ್ಲದೇ ದೂರ ಹೋಗುತ್ತಿರುವವಳು ನೀನು. "ಹೇಳೀ ಹೋಗು ಕಾರಣ" ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು, ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತಹ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು!!!
ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಬದುಕು ಬಂಗಾರವಾಗಲಿ.
ಗುಡ್ ಬೈ